ವರ್ಷಕ್ಕೊಮ್ಮೆ ದರುಶನ ನೀಡುವ ಹಾಸನಾಂಬೆ ಕ್ಷೇತ್ರದಲ್ಲಿ ನಡೆವ ಪವಾಡವೇನು ಗೊತ್ತಾ.

0
3621

ವರ್ಷಕ್ಕೊಮ್ಮೆ ದರುಶನ ನೀಡುವ ಹಾಸನಾಂಬೆ ಕ್ಷೇತ್ರದಲ್ಲಿ ನಡೆವ ಪವಾಡವೇನು ಗೊತ್ತಾ. ಬೆಂಗಳೂರಿನಿಂದ ಸುಮಾರು 187 ಕಿ.ಮೀ ದೂರಲ್ಲಿರುವ ಹಾಸನದಲ್ಲಿರುವ ದೇವಾಲಯವೇ ಹಾಸನಾಂಬ ಕ್ಷೇತ್ರ. ವರ್ಷಕ್ಕೊಮ್ಮೆ ದರ್ಶನ ನೀಡುವ ಈ ದೇವಿಯ ಪವಾಡವನ್ನು ನೋಡಲು ಜನರು ಕಾತುರದಿಂದ ಕಾಯುತ್ತಾರೆ.

ಸಾಮಾನ್ಯವಾಗಿ ಕೆಲವೊಂದು ಊರುಗಳಿಗೆ ದೇವರ ಹಿನ್ನೆಲೆಯಲ್ಲಿ ಬಂದಿರುವಂತಹ ಹೆಸರುಗಳಿವೆ. ಇಂತಹ ಸಾಲಿನಲ್ಲಿ ಸೇರುವ ಊರು ಹಾಸನ, ಈ ನಗರಕ್ಕೆ ಹಾಸನಾಂಬೆಯಿಂದಲೇ ಬಂದ ಹೆಸರಿದು. ಹಿಂದೆ ಹಾಸನಕ್ಕೆ ಸಿಂಹಾಸನಪುರಿ ಎಂಬ ಹೆಸರಿತ್ತು. ಕಾಲಾನಂತರದಲ್ಲಿ ಹಾಸನ ಎಂದಾಗಿದೆ. ಶಕ್ತಿಮಾತೆಯ ಸ್ವರೂಪವಾಗಿಯುವ ಹಾಸನಾಂಬೆ ಕ್ಷೇತ್ರದ ವಿಶೇಷತೆ ಎಂದರೆ ಈ ತಾಯಿಯು ವರ್ಷಕ್ಕೊಮ್ಮೆ ದೀಪಾವಳಿಯ ಸಂದರ್ಭದಲ್ಲಿ ತೆರೆಯುತ್ತದೆ. ಈ ದೇವಾಲಯದ ವೈಶಿಷ್ಟ್ಯತೆಯ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ.

ಐತಿಹಾಸಿಕ ದೇವಾಲಯವಾದ ಹಾಸನಾಂಬ ದೇವಿ ದೇವಸ್ಥಾನದ ಬಾಗಿಲನ್ನು ಆಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರದಂದು ತೆರೆದು ಬಲಿಪಾಡ್ಯಮಿಯ ದಿನ ಮುಚ್ಚಲಾಗುತ್ತದೆ. ಆದರೆ ಇಲ್ಲಿನ ಪವಾಡವೆಂದರೆ ಹಿಂದಿನ ವರ್ಷದಲ್ಲಿ ದೇವಿಗೆ ಹಾಕಲಾದ ಹೂವುಗಳು ತಾಜಾವಾಗಿರುತ್ತದೆ. ಹಾಗೂ ಹಿಂದಿನ ವರ್ಷದಲ್ಲಿ ಹಚ್ಚಿದ ನಂದಾದೀಪ ಆರದೆ ಉರಿಯುತ್ತಲೇ ಇರುತ್ತದೆ. ಈ ಕೌತುಕವನ್ನೇ ನೋಡಲು ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಸಪ್ತಮಾತೃಕೆಯರು ನೆಲೆಸಿರುವ ಸ್ಥಳ : ಪೌರಾಣಿಕ ಕಥೆಯ ಪ್ರಕಾರ ಅಂಧಕಾಸುರನೆಂಬ ರಾಕ್ಷಸನು ತಪಸ್ಸನ್ನು ಮಾಡಿ ಬ್ರಹ್ಮನನ್ನು ಮೆಚ್ಚಿಸಿ ವರವನ್ನು ಪಡೆದು ಬಲಿಷ್ಠನಾಗುತ್ತಾನೆ. ಮೂರೂ ಲೋಕದಲ್ಲೂ ಅಂಧಕಾಸುರನ ಉಪಟಳವನ್ನು ಮಾಡಲು ಆರಂಭಿಸುತ್ತಾನೆ. ಅಂಧಕಾಸುರನನ್ನು ಕೊಲ್ಲಲು ಶಿವನು ಬಂದಾಗ ಇಬ್ಬರ ನಡುವೆಯೂ ಯುದ್ಧ ನಡೆಯುತ್ತದೆ. ಅಂಧಕಾಸುರನ ರಕ್ತದ ಒಂದೊಂದು ಹನಿಯೂ ರಾಕ್ಷಸನಾಗಿ ಮರು ಜೀವ ಪಡೆಯುತ್ತದೆ.

ಇದನ್ನು ನಿಯಂತ್ರಿಸಲಾಗದೆ ಶಿವನು ತನ್ನ ಬಾಯಿಯಿಂದ ಯೋಗೇಶ್ವರಿಯನ್ನು ಸೃಷ್ಟಿಸಿದ. ಇತರ ದೇವತೆಗಳು ಶಿವನ ಸಹಾಯಕ್ಕಾಗಿ ತಮ್ಮ ಶಕ್ತಿಯನ್ನು ಕಳುಹಿಸಿದವರು ಈ ಶಕ್ತಿಯಿಂದ ಜನ್ಮತಾಳಿದವರೇ ಸಪ್ತಮಾತೃಕೆಯರಾದ ಬ್ರಾಹ್ಮೀ, ಮಹೇಶ್ವರೀ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಹಾಗೂ ಚಾಮುಂಡಿ.

ಸಪ್ತಮಾತೃಕೆಯರಾದ ವೈಷ್ಣವಿ, ಇಂದ್ರಾಣಿ, ಮಹೇಶ್ವರಿ, ಕೌಮಾರಿ, ಬ್ರಾಹ್ಮೀದೇವಿ, ವಾರಾಹಿ ಮತ್ತು ಚಾಮುಂಡಿ ವಾರಣಾಸಿಯಿಂದ ದಕ್ಷಿಣದ ಕಡೆ ಬಂದಾಗ ಪ್ರಕೃತಿಯ ಸೌಂದರ್ಯಕ್ಕೆ ಮಾರು ಹೋಗಿ ಇಲ್ಲೇ ನೆಲಸಲು ನಿರ್ಧರಿಸಿದರು. ಅವರಲ್ಲಿ ವೈಷ್ಣವಿ, ಕೌಮಾರಿ, ಮಹೇಶ್ವರಿಯರು ಹಾಸನಾಂಬ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ಹಾಗೂ ಬ್ರಾಹ್ಮೀದೇವಿಯು ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದಳು. ಇನ್ನುಳಿದ ದೇವತೆಯರಾದ ಚಾಮುಂಡಿ, ವರಾಹಿ, ಇಂದ್ರಾಣಿಯು ದೇವಿಗೆರೆಯ ಬಳಿ ನೆಲೆಸಿದರು ಎನ್ನಲಾಗುತ್ತದೆ. ಸಪ್ತಮಾತೃಕೆಯರು ಸದಾ ನಗುವ ದೇವತೆಯಾಗಿರುವ ಕಾರಣದಿಂದ ನಸುನಗುವ ದೇವತೆಗಳು ನೆಲೆಸಿರುವುದರಿಂದ ಹಸನ, ಹಾಸನವಾಗಿದೆ ಎನ್ನಲಾಗುತ್ತದೆ.

ಐತಿಹಾಸಿಕ ಕಥೆಯ ಪ್ರಕಾರ ಹಾಸನವು ಚೋಳರಸರ ಅಧಿಪತಿಯಾದ ಬುಕ್ಕ ನಾಯಕ ಮತ್ತು ಅವನ ವಂಶಸ್ಥರಾದ ಹೊಯ್ಸಳರಿಗೂ ಪೂರ್ವಕಾಲದಲ್ಲಿ ಇದು ಗಂಗರ ಆಡಳಿತಕ್ಕೆ ಒಳಪಟ್ಟಿತ್ತು. ಬುಕ್ಕನಾಯಕನ ನಂತರ 12ನೆಯ ಶತಮಾನದಲ್ಲಿ ಕೃಷ್ಣಪ್ಪನಾಯಕ ಎಂಬ ಪಾಳೇಗಾರನಿಗೆ ಸೇರಿತ್ತು.

ನಾಯಕನು ಒಮ್ಮೆ ಪ್ರಯಾಣ ಹೊರಟಾಗ ಮೊಲವೊಂದು ಅಡ್ಡ ಬಂದು ಪಟ್ಟಣವನ್ನು ಪ್ರವೇಶಿಸಿತು. ಈ ಅಪಶಕುನದಿಂದ ನಾಯಕನು ನೊಂದುಕೊಂಡನು. ಆಗ ಅವನಿಗೆ ಹಾಸನಾಂಬೆ ಪ್ರತ್ಯಕ್ಷಳಾಗಿ ‘ ಮಗು, ಖಿನ್ನ ಮನಸ್ಸು ಬಿಡು, ಈ ಸ್ಥಳದಲ್ಲಿ ಕೋಟೆಯನ್ನು ಕಟ್ಟು’ ಎಂದು ಹೇಳಿದಳಂತೆ. ಹೀಗಾಗಿ ಕೋಟೆಯನ್ನು ಕಟ್ಟಿದ ಕೃಷ್ಣಪ್ಪನಾಯಕನು ಒಂದು ಕೋಟೆಯನ್ನು ಕಟ್ಟಿ ಅದಕ್ಕೆ ಹಾಸನಾಂಬೆ ಎಂದು ಹೆಸರಿಟ್ಟನು. ಹಾಸನ ತಾಲ್ಲೂಕಿನ ಕುದುರುಗುಂಡಿ ಗ್ರಾಮದಲ್ಲಿರುವ ಕ್ರಿ.ಶ. 1140 ರ ವೀರಗಲ್ಲಿನ ಶಿಲಾ ಶಾಸನದಲ್ಲಿ ಇದನ್ನು ವಿವರಿಸಲಾಗಿದೆ.

ದಂತ ಕಥೆಯ ಪ್ರಕಾರ ಹಾಸನದಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ವಾಸವಿದ್ದರು, ಇಲ್ಲಿನ ದೇವತೆಯನ್ನು ‘ಹಸನ್ ಬೀ’ ಎಂದು ಕರೆಯುತ್ತಿದ್ದರು. ಈಕೆ ಮುಸ್ಲಿಂ ದೇವತೆಯೂ ಹೌದು. ಕಥೆಯ ಪ್ರಕಾರ ಸೊಸೆಯೊಬ್ಬಳು ಅತ್ತೆಯ ಕಿರುಕುಳವನ್ನು ತಾಳಲಾರದೆ ದೇವಾಲಯದೊಳಗೆ ಹೋಗಿ ಬಾಗಿಲು ಮುಚ್ಚಿಕೊಂಡು ಅಲ್ಲೇ ಲೀನವಾಗಿ ಹೋದಳು. ಒಂದು ವರ್ಷದ ನಂತರ ಬಾಗಿಲು ತೆರೆದರೆ ಅವಳ ಸುತ್ತಲೂ ಹುತ್ತ ಬೆಳೆದಿತ್ತು.

ಜೊತೆಗೆ ಒಂದು ದೀಪ ಸಹ ಉರಿಯುತ್ತಿತ್ತು. ಹೀಗೆ ದೇವತೆಯಾದವಳೇ ಹಸನ್‌ಬೀ. ಈ ಹಸನ್‌ಬೀಯ ಸಮಾಧಿ ಒಳಗಡೆ ಇದೆ ಎಂಬ ನಂಬಿಕೆ ಇದೆ. ಈ ಹಾಸನ್‌ ಬಿ ಎಂಬ ಪದವೇ ಮುಂದೆ ಹಸನಬಿ, ಹಾಸನಾಂಬೆಯಾಗಿ ಬದಲಾಗಿರಬಹುದು ಎನ್ನಲಾಗುತ್ತದೆ.

ಹಾಸನಾಂಬೆಯ ಪೂಜಾ ವಿಧಿ : ಆಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರದಂದು ಹಾಸನಾಂಬೆಯ ಬಾಗಿಲನ್ನು ತೆರೆಯುವ ದಿನ ಎಲ್ಲಾ ತಳವಾರ ಮನೆತನದವರು ಹಾಜರಿರುತ್ತಾರೆ. ಗರ್ಭಗುಡಿಯ ಮುಂದೆ ಬಾಳೆಯ ಕಂದನ್ನು ಅರಸು ಮನೆತನದವರಿಂದ ನೆಟ್ಟು ದೇವಿಯನ್ನು ಭಜಿಸುತ್ತಾ ಮನೆತನದವರಾದ ನರಸಿಂಹರಾಜ ಅರಸು ಬಾಳೆ ಕಂದನ್ನು ಕತ್ತರಿಸಿದ ನಂತರವೇ ದೇವಾಲಯದ ಬಾಗಿಲನ್ನು ತೆರೆಯುವುದು ಇಲ್ಲಿನ ಸಂಪ್ರದಾಯ.

ಗರ್ಭಗುಡಿಯ ಬಾಗಿಲನ್ನು ತೆರೆದ ಕೂಡಲೇ ಭಕ್ತರು ಹಾಸನಾಂಬೆಯ ದರ್ಶನ ಮಾಡಬಾರದು ಎನ್ನುವ ನಿಯಮವಿದೆ. ಇದರಿಂದ ಅಪಾಯವಾಗುವ ಸಾಧ್ಯತೆ ಹೆಚ್ಚು ಎನ್ನುವುದು ಜನರ ನಂಬಿಕೆ. ಈ ಕಾರಣಕ್ಕಾಗಿ ದೃಷ್ಟಿ ನಿವಾರಣೆಗೆ ಬಾಳೆ ಮರವನ್ನು ಕಡಿದ ಬಳಿಕ ಮರುದಿನ ಭಕ್ತರಿಗೆ ಪ್ರವೇಶವನ್ನು ನೀಡಲಾಗುತ್ತದೆ.

ಮೊದಲನೇ ದಿನ ಹಾಸನಾಂಬೆಗೆ ಯಾವುದೇ ರೀತಿಯ ಅಲಂಕಾರವನ್ನು ಮಾಡಲಾಗುವುದಿಲ್ಲ. ಎರಡನೇ ದಿನ ದೇವಿಯ ಆಭರಣ, ವಸ್ತ್ರಗಳನ್ನು ಜಿಲ್ಲಾ ಖಜಾನೆಯಿಂದ ಪಲ್ಲಕ್ಕಿಯೊಂದಿಗೆ ದೇವಾಲಯಕ್ಕೆ ತಂದು ತಾಯಿಯನ್ನು ಅಲಂಕರಿಸಿ ಪೂಜೆ ಮಾಡಿ, ನೈವೇದ್ಯವನ್ನು ಅರ್ಪಿಸಲಾಗುತ್ತದೆ. ದೇವಿಯ ವಸ್ತ್ರಗಳನ್ನು ಹುಣಸಿನ ಕೆರೆಯಲ್ಲಿರುವ ಮಡಿವಾಳರು ಒಗೆದ ನಂತರ ಪುರೋಹಿತರು ಮಡಿಯಲ್ಲಿ ಅಮ್ಮನವರ ಮೀಸಲು ಮನೆಯಲ್ಲಿ ನಮಸ್ಕರಿಸಿ ಇಡುತ್ತಾರೆ. ಈ ಬಾರಿ 13ದಿನಗಳ ಕಾಲ ಹಾಸನಾಂಬೆಯ ದರ್ಶನ ಇರಲಿದೆ.

ಬಲಿಪಾಡ್ಯಮಿಯಂದು ತುಪ್ಪದ ದೀಪವನ್ನು ಬೆಳಗಿಸಿ ಹಾಸನಾಂಬೆಯ ಗರ್ಭಗುಡಿಯೊಳಗೆ ಇಡಲಾಗುತ್ತದೆ. ಜೊತೆಗೆ ಹೂಗಳೊಂದಿಗೆ ಬೇಯಿಸಿದ ಅನ್ನವನ್ನು ನೈವೇದ್ಯವಾಗಿ ಇಡಲಾಗುತ್ತದೆ. ಪವಾಡವೆಂದರೆ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ದೀಪ ಉರಿಯುತ್ತಲೇ ಇದ್ದು, ಹೂಗಳು ತಾಜವಾಗಿರುತ್ತದೆ. ಹಾಗೂ ಪ್ರಸಾದವು ಕೂಡಾ ಹಾಳಾಗದೆ ಇರುತ್ತದೆ.

ಕಳ್ಳಪ್ಪನ ಗುಡಿ : ಒಮ್ಮೆ ದೇವಿಯ ವಿಗ್ರಹದ ಆಭರಣಗಳನ್ನು ಕದಿಯಲು ನಾಲ್ಕು ಜನ ಕಳ್ಳರು ದೇವಾಲಯಕ್ಕೆ ಪ್ರವೇಶಿಸಿದರು. ಇದರಿಂದ ಕುಪಿತಳಾದ ದೇವಿಯು ಅವರಿಗೆ ಶಾಪವನ್ನು ನೀಡಿ ಕಲ್ಲಾಗುವಂತೆ ಪರಿವರ್ತಿಸುತ್ತಾಳೆ. ಅಂದಿನಿಂದ ಇದು ಕಳ್ಳಪ್ಪನ ಗುಡಿಯೆಂದೇ ಪ್ರಸಿದ್ಧವಾಗಿದೆ.

ಸಿದ್ಧೇಶ್ವರ ದೇವಾಲಯ : ಹಾಸನಾಂಬೆಯ ದೇವಾಲಯವನ್ನು ಪ್ರವೇಶಿಸಿದ ತಕ್ಷಣವೇ ಕಾಣುವ ದೇವಾಲಯವೇ ಸಿದ್ಧೇಶ್ವರ ದೇಗುಲ. ಲಿಂಗ ರೂಪದ ಈ ಉದ್ಭವ ಮೂರ್ತಿಯು ಈಶ್ವರನು ಅರ್ಜುನನಿಗೆ ಪಾಶುಪತಾಸ್ತ್ರ ಕೊಡುವ ರೀತಿಯಲ್ಲಿದೆ. ಪ್ರತಿ ಅಮಾವಾಸ್ಯೆಯಂದು ರಾವಣೋತ್ಸವ, ಬಲಿಪಾಡ್ಯಮಿಯಂದು ಚಂದ್ರಮಂಡಲ ರಥೋತ್ಸವವು ಇಲ್ಲಿ ನಡೆಯುತ್ತದೆ.

ಹೋಗುವುದು ಹೇಗೆ? ಹಾಸನ ಬೆಂಗಳೂರು, ಮೈಸೂರು, ಮಂಗಳೂರು, ಮಡಿಕೇರಿ, ಚಿಕ್ಕಮಗಳೂರಿಗೆ ಸಂಪರ್ಕವನ್ನು ಹೊಂದಿದ್ದು ಪ್ರತಿದಿನ ಈ ನಗರಗಳಿಂದ ಹಾಸನಕ್ಕೆ ಬಯಸ್ಸನ ಸೌಕರ್ಯವಿದೆ. ಬೆಂಗಳೂರಿನಿಂದ ಸುಮಾರು 187 ಕಿ.ಮೀ ಮತ್ತು ಮೈಸೂರಿನಿಂದ 115 ಕಿ.ಮೀ ದೂರದಲ್ಲಿದೆ.

LEAVE A REPLY

Please enter your comment!
Please enter your name here