ನಮ್ಮ ಕರ್ನಾಟಕದಲ್ಲಿ ಇರುವ ಅತ್ಯಂತ ಮಹಿಮೆಯ ಗಣಪತಿಯ ದೇವಸ್ಥಾನಗಳಿವು! ಈ ದೇವಸ್ಥಾನದ ಗಣಪತಿಯನ್ನು ಒಮ್ಮೆ ನೆನೆದು ವಿಘ್ನ ನಿವಾರಿಸಿಕೊಳ್ಳಿ

0
1029

ದೊಡ್ಡ ಗಣಪತಿ : ದೊಡ್ಡ ಗಣೇಶನ ಗುಡಿ ಬೆಂಗಳೂರಿನ ಬಸವನಗುಡಿಯಲ್ಲಿದೆ. ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾದ ಈ ಪ್ರದೇಶ ಧಾರ್ಮಿಕತೆಯ ನೆಲೆ. ಬೆಂಗಳೂರಿನಲ್ಲಿರುವ ಹಲವು ಪುರಾತನ ದೇವಾಲಯಗಳ ಪೈಕಿ ಬಸವನಗುಡಿಯ ದೊಡ್ಡ ಗಣೇಶನ ದೇವಾಲಯ ಪ್ರಮುಖವಾದದ್ದು. ಕಹಳೆ ಬಂಡೆ ಅಥವಾ ಬ್ಯೂಗಲ್ ರಾಕ್ ಉದ್ಯಾನಕ್ಕೆ ಹೊಂದಿಕೊಂಡಿರುವ ವಿಶಾಲ ಪ್ರದೇಶದಲ್ಲಿ ದೊಡ್ಡ ಗಣೇಶನ ದೇವಾಲಯವಿದೆ. ಗರ್ಭಗುಡಿಯಲ್ಲಿ ಏಕಶಿಲೆಯಲ್ಲಿ ಕಡೆದ 8 ಅಡಿ ಎತ್ತರ ಹಾಗೂ 12 ಅಡಿ ಅಗಲ ಇರುವ ಗಣೇಶನ ವಿಗ್ರಹವಿದೆ. ಈ ಗಣಪ ಸ್ವಯಂ ಉದ್ಭವ ಗಣಪ ಎಂತಲೂ ಹೇಳುತ್ತಾರೆ.

ಶರವು ಮಹಾಗಣಪತಿ : ಮಂಗಳೂರಿನ ಪ್ರಮುಖ ದೇವಾಲಯಗಳಲ್ಲಿ ಶರವು ಗಣಪತಿ ದೇವಾಲಯವು ಒಂದಾಗಿದೆ. ಈ ದೇವಾಲಯವನ್ನು ತುಳುನಾಡಿನ ರಾಜ ವೀರಬಾಹು ಕಟ್ಟಿಸಿದ್ದಾನೆ. ಈ ದೇವಾಲಯ ನಿರ್ಮಾಣದ ಹಿಂದೆ ಒಂದು ಕಥೆಯಿದೆ. ಇಲ್ಲಿರುವ ಗಣೇಶ ಸ್ವಯಂ ಉದ್ಭವವಾಗಿದೆ ಹಾಗೂ ಈ ಗಣೇಶ ಶಕ್ತಿಶಾಲಿ ಎಂದು ಹೇಳಲಾಗುತ್ತದೆ.

ಆನೆಗುಡ್ಡೆ ಶ್ರೀ ವಿನಾಯಕ : ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯ ಈ ದೇವಸ್ಥಾನ ಉಡುಪಿಯ ಕುಂದಾಪುರದಲ್ಲಿ ಇದೆ. ಪುರಾಣದಲ್ಲಿ ಈ ದೇಗುಲವನ್ನು ಕುಂಬಾಶಿ ದೇವಾಲಯವೆಂದು ಕರೆಯಲಾಗಿತ್ತು. ಈಗಲೂ ಕೂಡ ಆನೆಗುಡ್ಡೆ ದೇವಾಲಯವನ್ನು ಕುಂಬಾಶಿ ದೇವಾಲಯವೆಂದು ಕರೆಯುತ್ತಾರೆ. ಈ ದೇಗುಲದಲ್ಲಿರುವ ಗಣೇಶ ಸ್ವಯಂಬು ಎಂದು ಹೇಳಲಾಗಿದ್ದು, ಗಣೇಶನ ವಿಗ್ರಹವನ್ನು ಕಲ್ಲಿನಿಂದ ಕೆತ್ತೆನೆ ಮಾಡಲಾಗಿದೆ.

ಹಟ್ಟಿಯಂಗಡಿ ಸಿದ್ಧಿ ವಿನಾಯಕ : ಹಟ್ಟಿಯಂಗಡಿ ದೇವಾಲಯವೂ ಉಡುಪಿಯಲ್ಲಿದೆ. ಈ ದೇವಾಲಯವೂ ಅಲೂಪ ರಾಜರ ಕಾಲದಲ್ಲಿ ನಿರ್ಮಿಸಲಾಗಿತ್ತು. ಆ ಕಾಲದಲ್ಲೇ ಗಣೇಶನ ವಿಗ್ರಹವನ್ನು ಸ್ಥಾಪಿಸಿದ್ದರು. ಹಟ್ಟಿಯಂಗಡಿ ದೇವಾಲಯ ವರಾಹಿ ನದಿ ದಡದ ಬಳಿ ಇದೆ.

ಇಡಗುಂಜಿ ವಿನಾಯಕ ದೇವಾಲಯ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಈ ದೇವಾಲಯವಿದ್ದು, ಈ ಗ್ರಾಮದಲ್ಲಿ ಸಾಕಷ್ಟು ಪವಾಡಗಳು ಕೂಡ ನಡೆಯುತ್ತದೆ ಎಂದು ಹೇಳಲಾಗುತ್ತದೆ. ಈ ಗ್ರಾಮದವರು ಹಾಗೂ ಅಕ್ಕಪಕ್ಕದ ಗ್ರಾಮದವರು ಈ ಗಣೇಶ ಸಾಕಷ್ಟು ಶಕ್ತಿಶಾಲಿ ಎಂದು ನಂಬುತ್ತಾರೆ.

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ : ಈ ದೇವಾಲಯವೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಬೆಳ್ತಂಗಡಿ ತಾಲೂಕಿನ ಕೊಕ್ಕಡದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. ಈ ಕ್ಷೇತ್ರದ ವಿಶೇಷತೆವೆಂದರೆ ಇಲ್ಲಿನ ಆರಾಧ್ಯ ದೇವರಾದ ಗಣಪನಿಗೆ ಗರ್ಭಗುಡಿ ಇಲ್ಲ. ಈ ಕ್ಷೇತ್ರವು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಸುಮಾರು 35 ಕಿ.ಮೀ, ಧರ್ಮಸ್ಥಳದಿಂದ ಸುಮಾರು 16 ಕಿ.ಮೀ ದೂರದಲ್ಲಿದೆ. ಭಕ್ತರು ಈ ದೇವಾಲಯಕ್ಕೆ ಹರಕೆ ರೂಪದಲ್ಲಿ ಗಂಟೆಗಳನ್ನು ನೀಡುವುದು ಇಲ್ಲಿಯ ವಿಶೇಷತೆ.

ಮಧೂರು ದೇವಸ್ಥಾನ : ಕಾಸರಗೋಡು ಜಿಲ್ಲೆಯ ಮಧೂರು ಊರಿನಲ್ಲಿ ಗಣಪತಿ ಬಹಳ ಪ್ರಸಿದ್ಧ. ಮಂಗಳೂರಿನಿಂದ ಕಾಸರಗೋಡಿಗೆ ಹೋಗಿ ಅಲ್ಲಿಂದ ಮಧೂರಿಗೆ ಹೋಗಬಹುದು. ಮಳೆಗಾಲದಲ್ಲಿ ನದಿ ನೀರು ದೇವಾಲಯದ ಆವರಣವನ್ನು ಪ್ರವೇಶಿಸುತ್ತದೆ. ಧರ್ಮಗುಪ್ತನೆಂಬ ದೊರೆ, ಕೈಗೊಂಡಿದ್ದ ಅತಿರುದ್ರ ಮಹಾಯಾಗಕ್ಕೆ ಯಾವುದೇ ವಿಘ್ನ ಬಾರಬಾರದೆಂದು ಈ ಗಣೇಶನ ದೇವಾಲಯದಲ್ಲಿ ಮದನಂತೇಶ್ವರ ಲಿಂಗವನ್ನೂ ಪ್ರತಿಷ್ಠಾಪಿಸಿದ್ದ ಎನ್ನುವ ಕಥೆಯಿದೆ. ಹಾಗಾಗಿ ಈ ದೇವಾಲಯವನ್ನು ಮದನಂತೇಶ್ವರ ಸಿದ್ಧಿ ವಿನಾಯಕ ದೇವಾಲಯ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ದೇವಾಲಯವನ್ನು ಗಜ ಪೃಷ್ಠ ಆಕಾರದಲ್ಲಿ ನಿರ್ಮಾಣ ಮಾಡಲಾಗಿದೆ.

LEAVE A REPLY

Please enter your comment!
Please enter your name here