ಸೂರ್ಯನ ಪ್ರತಿಮೆ ಮಾಡುವವರು ಅವನ ಕಾಲನ್ನು ಏಕೆ ಮಾಡುವುದಿಲ್ಲ. ಈ ಕಥೆಯನ್ನು ಯಾರು ಓದುತ್ತಾರೋ ಅವರ ಜೀವನ ಪಾವನವಾಗುತ್ತದೆ.

0
2451

ಸೂರ್ಯನ ಪರಿವಾರ. ಸೂರ್ಯನು ವಿಶ್ವಕರ್ಮನ ಪುತ್ರಿಯಾದ ಸಂಜ್ಞಾದೇವಿಯನ್ನು ಮದುವೆಯಾಗಿ ವೈವಸ್ವತ ಮನು ಎಂಬ ಪುತ್ರನನ್ನು ಪಡೆದನು.ಆದರೆ ದುರ್ದೈವದಿಂದ ಸಂಜ್ಞಾ ದೇವಿಗೆ ಸೂರ್ಯನ ಪ್ರಖರತೆಯನ್ನು ಬಹುಕಾಲ ಸಹಿಸಿಕೊಳ್ಳಲಾಗಲಿಲ್ಲ. ಸೂರ್ಯನನ್ನು ಸೇರಿದಾಗಲೆಲ್ಲ ಅವಳಿಗೆ ಕೆಂಡ ಮುಟ್ಟಿದಂತಾಗುತ್ತಿತ್ತು. ಇದನ್ನು ಗಮನಿಸಿದ ಸೂರ್ಯನು ಭದ್ರೆ, ನೀನು ನನ್ನನ್ನು ಸೇರಿದಾಗಲೆಲ್ಲ ಕಣ್ಣುಗಳನ್ನು ಸಂಯಮಗೊಳಿಸುತ್ತಿರುವೆ ಮತ್ತು ನಿನ್ನ ದೃಷ್ಟಿಯು ಚಂಚಲವಾಗಿರುತ್ತದೆ ಎಂದನು.

ಇದಾದ ನಂತರ ಸಂಜ್ಞಾ ದೇವಿಗೆ ಯಮ ಯಮಿ ಎಂಬ ಅವಳೀ ಮಕ್ಕಳು ಜನಿಸಿದರು. ಸೂರ್ಯನು ಹೇಳಿದಂತೆ ಗಂಡು ಶಿಶುವಿಗೆ ಯಮ ಎಂಬ ಹೆಸರಾಯಿತು. ಅಂದರೆ ಪ್ರಜೆಗಳನ್ನು ಸಂಯಮದಲ್ಲಿಡುವವನು ಎಂದರ್ಥ ( ಪ್ರಜಾಸಂಯಮಂ ಯಮಮ್). ಹೆಣ್ಣು ಶಿಶುವಿಗೆ ಯಮಿ ಎಂಬ ಹೆಸರಾಯಿತು. ಹಾಗೆಯೇ ಅವಳು ತನ್ನ ಒಂದು ಅಂಶದಿಂದ ಚಂಚಲ ಅಲೆಗಳಿಂದ ಕೂಡಿದ ಯಮುನಾ ನದಿಯಾದಳು (ಆದರೆ ನರಸಿಂಹ ಪುರಾಣದ ಪ್ರಕಾರ, ಛಾಯಾದೇವಿಯ ಶಾಪದಿಂದ ಅವಳು ನದಿಯಾದಳು).

ಕೆಲಕಾಲದ ನಂತರ ಸಂಜ್ಞಾ ದೇವಿಯು ತನ್ನ ನೆರಳಿಗೆ ಜೀವ ತುಂಬಿ, ಅವಳನ್ನು ಛಾಯಾದೇವಿ ಎಂದು ಕರೆದು ಇನ್ನು ಮುಂದೆ ನೀನು ನನ್ನ ಪತಿಗೆ ಪತ್ನಿಯಾಗಿರು ಎಂದು ಹೇಳಿ ಹೊರಟು ಹೋದಳು. ಈಕೆಯ ಮೈ ಬಣ್ಣ ಸಂಜ್ಞಾ ದೇವಿಯ ಮೈ ಬಣ್ಣದಂತೆಯೇ ಇದ್ದುದರಿಂದ ಆಕೆಯನ್ನು ಸುವರ್ಣಾ ದೇವಿ (ಸವರ್ಣಾ ದೇವಿ) ಎಂದೂ ಕರೆಯುತ್ತಾರೆ. ಇದು ಸೂರ್ಯನಿಗಾಗಲೀ ಅಥವಾ ಸಂಜ್ಞಾ ದೇವಿಯ ಮಕ್ಕಳಿಗಾಗಲೀ ತಿಳಿಯಲಿಲ್ಲ.

ಕಾಲಕ್ರಮದಲ್ಲಿ ಛಾಯಾದೇವಿಗೆ ಸಾವರ್ಣಿ ಮನು, ಶನೈಶ್ಚರ ಮತ್ತು ತಪತಿ ಎಂಬ ಮಕ್ಕಳು ಜನಿಸಿದರು. ಮೊದಮೊದಲು ಛಾಯಾದೇವಿಯು ಸಂಜ್ಞಾದೇವಿಯ ಮಕ್ಕಳನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಆದರೆ ತನಗೆ ಮಕ್ಕಳಾದ ನಂತರ ಆಕೆಯು ಸಂಜ್ಞಾ ದೇವಿಯ ಮಕ್ಕಳನ್ನು ತಾತ್ಸಾರದಿಂದ ನೋಡತೊಡಗಿದಳು. ಒಮ್ಮೆ ಶೀಘ್ರ ಕೋಪಿಯಾದ ಯಮನು ತನ್ನ ಕಾಲನ್ನು ನೆಲಕ್ಕೆ ಅಪ್ಪಳಿಸಿ ಛಾಯಾದೇವಿಯನ್ನು ಬಹು ವಿಧವಾಗಿ ನಿಂದಿಸಿದನು.

ಇದರಿಂದ ಕುಪಿತಗೊಂಡ ಛಾಯಾದೇವಿಯು ನಿನ್ನ ಕಾಲಿನಲ್ಲಿ ಹುಳ ಬೀಳಲಿ ಎಂದು ಶಪಿಸಿದಳು. ವಿಷಯ ತಿಳಿದ ಸೂರ್ಯನು ದಿವ್ಯ ದೃಷ್ಟಿಯಿಂದ ಎಲ್ಲವನ್ನೂ ತಿಳಿದು, ಛಾಯಾದೇವಿಯನ್ನು ಬಹುವಾಗಿ ನಿಂದಿಸಿ, ಯಮನನ್ನು ಶಾಪದಿಂದ ಮುಕ್ತಿಗೊಳಿಸಿ, ತನ್ನ ಮಾವನಾದ ವಿಶ್ವಕರ್ಮನ ಮನೆಗೆ ಬಂದನು. ಆದರೆ ಅಲ್ಲಿ ಸಂಜ್ಞಾದೇವಿಯು ಇರಲಿಲ್ಲ. ಆಗ ವಿಶ್ವಕರ್ಮನು ದೇವ, ಇಷ್ಟೆಲ್ಲಾ ರಾದ್ಧಾಂತಕ್ಕೆ ನಿನ್ನ ಪ್ರಖರತೆಯೇ ಕಾರಣ ಎಂದು ಹೇಳಿ ಸೂರ್ಯನ ಶರೀರವನ್ನು ಸಾಣೆ ಹಿಡಿಯಲು ಪ್ರಾರಂಭಿಸಿದನು.

ಸೂರ್ಯನಿಗೆ ನೋವನ್ನು ತಡೆಯಲಾಗಲಿಲ್ಲ. ಇದನ್ನು ಗಮನಿಸಿದ ವಿಶ್ವಕರ್ಮನು ಕರವೀರ ಪುಷ್ಪಗಳ ರಸವನ್ನು ಸೂರ್ಯನ ಮೈಗೆ ಲೇಪಿಸಿದನು. ಅಂದಿನಿಂದ ಕರವೀರ ಪುಷ್ಪಗಳು ಸೂರ್ಯನಿಗೆ ಪ್ರಿಯವಾದವು. ಈ ರೀತಿ ಸೂರ್ಯನಿಂದ ಹೊರತೆಗೆದ ತೇಜಸ್ಸಿನಿಂದ ವಿಶ್ವಕರ್ಮನು ವಿಷ್ಣುವಿಗೆ ಚಕ್ರವನ್ನು, ಶಿವನಿಗೆ ತ್ರಿಶೂಲವನ್ನು, ಇಂದ್ರನಿಗೆ ವಜ್ರಾಯುಧವನ್ನು ಮತ್ತು ಅನೇಕ ಆಯುಧಗಳನ್ನು ಮಾಡಿದನು. ಈ ರೀತಿಯಲ್ಲಿ ತನ್ನ ತೇಜಸ್ಸಿನಲ್ಲಿ ಕೊಂಚ ಭಾಗವನ್ನು ಕಳೆದುಕೊಂಡ ಸೂರ್ಯನ ರೂಪವು ಸರ್ವಸಮವಾಯಿತು.

ಈ ಕಾರಣದಿಂದ ಸೂರ್ಯನನ್ನು ವಿಭಾವಸು ಎಂದೂ ಕರೆಯುತ್ತಾರೆ. ಆಶ್ಚರ್ಯವೆಂದರೆ ಎಷ್ಟು ಪ್ರಯತ್ನಿಸಿದರೂ ವಿಶ್ವಕರ್ಮನಿಗೆ ಸೂರ್ಯನ ಕಾಲುಗಳಿಂದ ತೇಜಸ್ಸನ್ನು ತೆಗೆಯಲಾಗಲಿಲ್ಲ. ಆದ್ದರಿಂದ ಈಗಲೂ ಸಹ ಸೂರ್ಯನ ಪ್ರತಿಮೆ ಮಾಡುವವರು ಸೂರ್ಯನ ಕಾಲುಗಳನ್ನು ಮಾತ್ರ ಮಾಡುವುದಿಲ್ಲ. ಹಾಗೊಮ್ಮೆ ಮಾಡಿದರೆ ಅವರಿಗೆ ಕು’ಷ್ಠರೋಗ ಬರುತ್ತದೆ. ಇದಾದ ನಂತರ ಸೂರ್ಯನು ದಂಡಕಾರಣ್ಯಕ್ಕೆ ಹೋಗಿ ಕುದುರೆಯ ರೂಪದಲ್ಲಿ ಹೆಣ್ಣು ಕುದುರೆಯಾಗಿದ್ದ ಸಂಜ್ಞಾ ದೇವಿಯಲ್ಲಿ ತನ್ನ ರೇತಸ್ಸನ್ನು ವಿಸರ್ಜಿಸಿದನು.

ಆದರೆ ಸಂಜ್ಞಾ ದೇವಿಯು ರೇತಸ್ಸನ್ನು ತನ್ನ ಮೂಗಿನ ಮೂಲಕ ಹೊರದಬ್ಬಿದಳು. ಇದರಿಂದ ಅಶ್ವಿನಿ ದೇವತೆಗಳು ಜನಿಸಿದರು. ಸೂರ್ಯನಿಗೆ ಪ್ರಭಾ ಮತ್ತು ರಾಜ್ಞಿ ಎಂಬ ಪತ್ನಿಯರೂ ಇದ್ದರು. ಪ್ರಭಾತನು ಪ್ರಭಾಳ ಪುತ್ರನಾದರೆ, ರೇವತನು ರಾಜ್ಞಿಯ ಪುತ್ರನು. ಇವರಲ್ಲದೆ ಸೂರ್ಯನ ಅಂಶದಿಂದ ಕುಂತಿಯು ಕರ್ಣನನ್ನು, ಋಕ್ಷರಜಸ್ಸು ಸುಗ್ರೀವನನ್ನು ಮತ್ತು ಊರ್ವಶಿಯು ಅಗಸ್ತ್ಯನನ್ನು ಪಡೆದರು. ಸೂರ್ಯನಿಂದ ಸೂರ್ಯವಂಶ ಪ್ರಾರಂಭವಾಯಿತು.

LEAVE A REPLY

Please enter your comment!
Please enter your name here