ನರಕಾಸುರನ ಅಂತ್ಯ ಎಲ್ಲರಿಗೂ ಗೊತ್ತು. ಆದರೆ, ಹುಟ್ಟು ಹೇಗಾಯಿತು.

0
1758

ತಂದೆ ಹೇಳುತ್ತಾನೆ : ಮಗನ ನಡವಳಿಕೆ ಯಾಕೋ ತುಂಬ ಕೆಟ್ಟದು ಅನಿಸುತ್ತದೆ. ಈಗಲೇ ತಿದ್ದದೆ ಹೋದರೆ ತುಂಬ ಕಷ್ಟ. ಮಾನವೀಯತೆಯೇ ಇಲ್ಲದ ಕೆಟ್ಟ ಮನುಷ್ಯನಾಗುವ ಅಪಾಯವಿದೆ. ಮುಂದೆ ನಮಗೂ ಕೆಟ್ಟ ಹೆಸರು ತರಬಹುದು. ತಾಯಿ ಹೇಳುತ್ತಾಳೆ : ನಿಮಗೆ ಯಾವಾಗಲೂ ಅವನ ಮೇಲೆ ಸಂಶಯ. ಈಗ ಸಣ್ಣವನಲ್ಲವೇ. ಎಲ್ಲಮಕ್ಕಳೂ ಹೀಗೇ ಇರ್ತವೆ. ಬೆಳೆಯುತ್ತಾ ಬದಲಾಗುತ್ತಾನೆ. ನಾನು ಇದ್ದೇನಲ್ಲ. ನೋಡಿಕೊಳ್ತೇನೆ. ನಿಮಗೆ ಅದರ ಬಗ್ಗೆ ಚಿಂತೆ ಬೇಡ.

ಪ್ರತಿ ಮನೆಯಲ್ಲೂಇಂತಹುದೊಂದು ಸಂಭಾಷಣೆ ನಡೆಯುತ್ತಲೇ ಇರುತ್ತದೆ. ಪಾತ್ರಗಳು ಅದಲು ಬದಲಾಗಬಹುದು ಅಷ್ಟೆ. ಅಪ್ಪ ಮಕ್ಕಳಿಗೆ ಬೈದರೆ ತಾಯಿ ಮಕ್ಕಳ ಪರವಾಗಿ ನಿಲ್ಲುವುದು, ತಾಯಿ ಬೈದರೆ ತಂದೆ ಮಕ್ಕಳನ್ನು ಬೆಂಬಲಿಸುವುದು. ಬಹುಶಃ ಆವತ್ತು ಕೂಡಾ ಇದೇ ನಡೆದಿರಬೇಕು. ಆವತ್ತು ಅಂದರೆ ಯುಗಾಂತರಗಳ ಹಿಂದೆ. ದುಷ್ಟನಾದ ಹಿರಣ್ಯಾಕ್ಷ ಭೂದೇವಿಯನ್ನೇ ಅಪಹರಿಸಿ ಸಮುದ್ರದಾಳದಲ್ಲಿಸೂರ್ಯ ಕಿರಣಗಳು ಸೋಕದ ಗಹ್ವರದೊಳಗೆ ಅಡಗಿಸಿಟ್ಟಿದ್ದ.

ಅವಳನ್ನು ರಕ್ಷಿಸುವುದಕ್ಕಾಗಿ ವಿಷ್ಣು ವರಾಹ ಅವತಾರವನ್ನು ತಾಳಿ ಸಾಗರ ಗರ್ಭಕ್ಕೆ ತೆರಳಿ, ಬೆದರಿ ಕಂಗಾಲಾಗಿದ್ದ ಭೂಮಾತೆಯನ್ನು ತನ್ನ ಕೋರೆ ದಾಡೆಗಳ ನಡುವೆ ಕೂರಿಸಿ ಮೇಲೆ ತಂದಿದ್ದ. ಹಾಗೆ, ದಾಡೆಗಳ ನಡುವಿನ ಸುಖ ಸ್ಖಲನದಲ್ಲಿಭೂದೇವಿ ಗರ್ಭವತಿಯಾಗಿ ಧರೆಗೆ ಬಂದವನೇ ನರಕಾಸುರ. ಹುಟ್ಟಲಿರುವ ಮಗುವಿನ ರಾಕ್ಷಸೀ ಶಕ್ತಿಗಳ ಅರಿವು ಇದ್ದ ವಿಷ್ಣು ಆಗಲೇ ನಾಶ ಮಾಡುವ ಮನಸು ಮಾಡಿದರೂ ಭೂದೇವಿಯ ಹೆತ್ತ ಕರುಳು ಮಗು ತಿದ್ದಿಕೊಂಡು ಬಾಳೀತು ಎಂದು ಆಸೆಪಟ್ಟಿತು.

ಆದರೆ, ಮಗ ದುಷ್ಟನಾಗಿಯೇ ಬೆಳೆದ. ಬಹುಶಃ ಭೂದೇವಿ ವಿಷ್ಣುವಿನ ಮಾತನ್ನು ಕೇಳಿದ್ದರೆ, ಗಂಡ-ಹೆಂಡತಿ ಪರಸ್ಪರ ತಿಳಿವಳಿಕೆಯಿಂದ ಮಗುವನ್ನು ತಿದ್ದಿ ಬೆಳೆಸಿದ್ದರೆ ಬೌಮ ನಾಮಕನಾಗಿದ್ದ ಆತ ತನ್ನ ಕ್ರೌರ್ಯದಿಂದ ಮುಂದೆ ನರಕಾಸುರನಾಗುತ್ತಿರಲಿಲ್ಲವೋ ಏನೋ. ವಿಷ್ಣು ಆವತ್ತೇ ಹೇಳಿದ್ದ. ಯಾವತ್ತು ನಿನಗೆ ನಿನ್ನ ಮಗ ಒಬ್ಬ ದುಷ್ಟ ಎಂದು ತಿಳಿಯುತ್ತದೆಯೋ ಅಂದು ನೀನೇ ಅವನನ್ನು ಕೊಂದು ಹಾಕುವ ಕಾಲ ಬರುತ್ತದೆ ಎಂದು. ಭೂದೇವಿಯೂ ‘ಆ ಕಾಲ ಬಂದಾಗ ನೋಡೋಣ’ ಎಂದಿದ್ದಳು.

ಅಷ್ಟರ ನಡುವೆ ಪ್ರಗ್ಜೋತಿಷ್ಯಪುರದ ಅಧಿಪತಿಯಾಗಿದ್ದ ನರಕಾಸುರ ಮಹಾದುಷ್ಟನಾಗಿದ್ದ. ಮೂರು ಲೋಕಗಳನ್ನು ಜಯಿಸಿ ಅಷ್ಟೈಶ್ವರ್ಯಗಳನ್ನು ಸಂಪಾದಿಸಿದ್ದ. ಸ್ವರ್ಗವನ್ನೂ ಸೂರೆ ಮಾಡಿದ್ದ. ಕೊನೆಗೆ ದೇವ ಮಾತೆ ಅದಿತಿ ದೇವಿಯ ಕರ್ಣ ಕುಂಡಲಗಳಿಗೂ ಕಣ್ಣು ಹಾಕಿದ್ದ. 16000 ದೇವತಾ ಸ್ತ್ರೀಯರನ್ನು ತಂದು ಕತ್ತಲ ಕೋಣೆಯಲ್ಲಿರಿಸಿದ್ದ. ಪ್ರಶ್ನಿಸಿದವರೆಲ್ಲರ ರುಂಡ ಕತ್ತರಿಸಿದ್ದ. ಅತಿಮಾನುಷನಾಗಿ, ಅಜೇಯನಾಗಿ ಮೆರೆದಿದ್ದ. ಹೆತ್ತ ತಾಯಲ್ಲದೆ ಅನ್ಯರಿಂದ ಮರಣವಿಲ್ಲಎಂಬ ಬ್ರಹ್ಮನ ವರ ಬಲ ಅವನನ್ನು ಗಟ್ಟಿಗೊಳಿಸಿತ್ತು.

ಅದೊಂದು ಬಾರಿ ಅದಿತಿ ದೇವಿ ತನ್ನ ಸಂಬಂಧಿಯಾದ ಸತ್ಯಭಾಮೆಯಲ್ಲಿತನ್ನ ಗೋಳನ್ನು ತೋಡಿಕೊಂಡಿದ್ದಳು. ಸತ್ಯಭಾಮೆ ಕೃಷ್ಣನ ಮುಂದೆ ನರಕಾಸುರನ ಕ್ರೌರ್ಯದ ಕತೆ ಹೇಳಿದಾಗ ಅತನಿಗೆ ಒಳಗೊಳಗೇ ನಗು. ಯಾಕೆಂದರೆ, ಭೂದೇವಿಯೇ ಮುಂದಿನ ಜನ್ಮದಲ್ಲಿ ಸತ್ಯಭಾಮೆಯಾಗಿ ಹುಟ್ಟಿದ್ದು. ಅಂದಿನ ವರಾಹ ರೂಪಿ ವಿಷ್ಣುವೇ ಇಂದಿನ ಕೃಷ್ಣ! ಮಗ ಈ ಮಟ್ಟಕ್ಕೆ ದುಷ್ಟನಾಗುತ್ತಾನೆ ಎಂದು ಆವತ್ತೇ ಎಚ್ಚರಿಸಿದ್ದೆ ಎಂದು ಕೃಷ್ಣ ನಕ್ಕಿರಲೂಬಹುದು.

ಅಂತಿಮವಾಗಿ ಕೃಷ್ಣ, ಸತ್ಯಭಾಮೆಗೆ ಬೇರಾವ ಮಾತನ್ನೂ ಹೇಳದೆ ‘ನಿನಗೆ ನನ್ನ ಯುದ್ಧ ನೋಡುವ ಆಸೆ ಎಂದು ಹೇಳುತ್ತಿದ್ದೆಯಲ್ಲಾ. ಜತೆಗೆ ಬಾ’ ಎಂದು ಉಪಾಯದಿಂದ ಆಕೆಯನ್ನೂ ಯುದ್ಧರಂಗಕ್ಕೆ ಕರೆದೊಯ್ಯುತ್ತಾನೆ. ಮುರಾಸುರಾದಿ ದಾನವರನ್ನು ಕೊಂದು ಅಂತಿಮವಾಗಿ ನರಕಾಸುರನ ಮುಂದೆ ನಿಲ್ಲುತ್ತಾನೆ ಕೃಷ್ಣ. ಸಾರಥಿಯಾಗಿ ಕುಳಿತವಳು ಸತ್ಯಭಾಮೆ.

ಸಾವಿರ ಸಾವಿರ ಅಸ್ತ್ರ ಪ್ರಯೋಗದ ಹೊರತಾಗಿಯೂ ಯುದ್ಧ ನಿಲ್ಲಲಿಲ್ಲ. ಕೊನೆಗೊಮ್ಮೆ ನರಕಾಸುರ ಎಸೆದ ತ್ರಿಶೂಲ ಕೃಷ್ಣನ ಎದೆಯನ್ನು ತಿವಿದು ಅವನು ಧರೆಗುರುಳಿದ. ಯುದ್ಧ ರಂಗದಲ್ಲಿ ಏನು ಮಾಡಬೇಕು ಎಂದು ತಿಳಿಯದೆ ಕಂಗಾಲಾದ ಸತ್ಯಭಾಮೆ ಅದೇ ತ್ರಿಶೂಲವನ್ನು ಎತ್ತಿ ಗಹಗಹಿಸಿ ನಗುತ್ತಿದ್ದ ನರಕಾಸುರನ ಮೇಲೆ ಎಸೆಯುತ್ತಾಳೆ. ತ್ರಿಶೂಲ ಎದೆ ಬಗೆಯುತ್ತಿದ್ದಂತೆಯೇ ನರಕಾಸುರ ನೆಲಕ್ಕೊರಗಿದ. ಅಷ್ಟು ಹೊತ್ತಿನವರೆಗೆ ಸತ್ತವನಂತೆ ನಟಿಸುತ್ತಿದ್ದ ಕೃಷ್ಣ ಮುಗುಳ್ನಗುತ್ತಾ ಎದ್ದು ನಿಂತು ಹೆತ್ತ ತಾಯಿಯಿಂದಲೇ ನಡೆದ ನರಕಾಸುರ ವಧೆಯನ್ನು ಸತ್ಯಭಾಮೆಗೆ ವಿವರಿಸಿದ.

ಈ ಮಹಾ ಕಥೆ ದುಷ್ಟನೊಬ್ಬನಿಗೆ ತನ್ನ ತಾಯಿಯಿಂದಲೇ ಮರಣ ಬರುತ್ತದೆ ಎಂಬ ಸಂದೇಶದ ಜತೆಗೆ ಮಗನ ಕ್ರೌರ್ಯದ ಬಗ್ಗೆ ಗೊತ್ತಿದ್ದರೂ ಅದನ್ನು ನಿವಾರಿಸದೆ, ತಿದ್ದದೆ ಆತ ಲೋಕ ಕಂಟಕನಾಗಿ ಬೆಳೆಯುವಲ್ಲಿ ವಿಷ್ಣು-ಭೂದೇವಿ, ಕೃಷ್ಣ-ಸತ್ಯಭಾಮೆಯರು ಬಾಧ್ಯಸ್ಥರು ಎನ್ನುವುದನ್ನೂ ಸೂಚಿಸುತ್ತದೆ. ಇದಿಷ್ಟೇ ಅಲ್ಲ, ನರಕಾಸುರನ ಬದುಕು ಮತ್ತು ಅಂತ್ಯ ಇಂದಿಗೂ ಸಕಾಲಿಕವಾದ ಹಲವು ಸಂದೇಶಗಳ ಆಗರ. ನಾವೇನು ಮಾಡಬೇಕು.

1. ಬಾಲ್ಯದಲ್ಲೇ ತಿದ್ದಿ ಬೆಳೆಸೋಣ : ಮಕ್ಕಳನ್ನು ಬೆಳೆಸುವಲ್ಲಿತಾಯಿ-ತಂದೆ ಇಬ್ಬರದೂ ಸಮಪಾಲು ಇರುತ್ತದೆ. ತಪ್ಪು-ಒಪ್ಪುಗಳ ಬಗ್ಗೆ ಇಬ್ಬರೂ ಏಕಾಭಿಪ್ರಾಯವನ್ನು ಹೊಂದಿದಾಗಲೇ ಮಕ್ಕಳಿಗೆ ಅದನ್ನು ತಿದ್ದಿಕೊಳ್ಳಲು ಅವಕಾಶ ದೊರೆಯುವುದು. ಇಬ್ಬರಲ್ಲಿಒಬ್ಬರು ತಪ್ಪನ್ನು ಬೆಂಬಲಿಸಿದಾಗ ಮಕ್ಕಳಲ್ಲಿಸಲಿಗೆ ಹುಟ್ಟಿಕೊಳ್ಳುತ್ತದೆ. ಅದು ಬುದ್ಧಿವಾದವೇ ಇರಬಹುದು, ಶಿಕ್ಷೆಯೇ ಇರಬಹುದು. ಓದು-ಕಲಿಕೆ ವಿಚಾರವೇ ಇರಬಹುದು. ಗಂಡ-ಹೆಂಡಿರ ಭಿನ್ನಮತ ಮಕ್ಕಳ ಇನ್ನಷ್ಟು ತಪ್ಪಿಗೆ ಕಾರಣವಾಗಬಾರದು. ದುಷ್ಟತನವನ್ನೂ ಸಮರ್ಥಿಸುವುದು, ತಪ್ಪನ್ನೂ ಬೆಂಬಲಿಸುವ ಪ್ರೀತಿ ಮಕ್ಕಳನ್ನು ಹಾಳು ಮಾಡೀತು.

2. ಮಿಲನದಲ್ಲಿ ಶೃಂಗಾರವಿರಲಿ : ವಿಷ್ಣುವೂ ಒಳ್ಳೆಯವನು, ಭೂದೇವಿಯೂ ಒಳ್ಳೆಯವಳು. ಹಾಗಿದ್ದರೆ ನರಕಾಸುರ ಹೇಗೆ ಕೆಟ್ಟವನಾದ ಎನ್ನುವುದು ಎಲ್ಲರನ್ನೂ ಕಾಡಬಹುದಾದ ಪ್ರಶ್ನೆ. ಅವರಿಬ್ಬರ ಸಂಯೋಗ ನಡೆದಾಗ ವಿಷ್ಣು ವರಾಹ ರೂಪಿಯಾಗಿದ್ದ. ಅದರಲ್ಲೂ ಹಿರಣ್ಯಾಕ್ಷನನ್ನು ಕೊಂದ ಕ್ರೋಧದಲ್ಲಿದ್ದ. ಆಗ ಅವನಲ್ಲಿಇದ್ದುದು ಸಾತ್ವಿಕತೆಯಲ್ಲ. ಪಾಶವಿ ಶಕ್ತಿ. ಅದರಿಂದಾಗಿಯೇ ಹುಟ್ಟಿದ ಮಗುವಿನಲ್ಲೂಪಾಶವೀ ವರ್ತನೆಯೇ ಹೆಚ್ಚಾಗಿತ್ತು. ಮಿಲನ ಎನ್ನುವುದು ಶೃಂಗಾರವಾಗಿರಬೇಕೇ ಹೊರತು ಕ್ರೌರ್ಯದ ಮನಸ್ಥಿತಿಯಲ್ಲಿನಡೆಯುವ ಸಂಬಂಧ ಆಗಿರಬಾರದು ಎನ್ನುವುದಕ್ಕೆ ಇದು ಉತ್ತಮ ನಿದರ್ಶನ. ಈಗಿನ ಕಾಲಕ್ಕೆ ಹೋಲಿಸಿ ಹೇಳುವುದಾದರೆ ವಿಪರೀತ ಒತ್ತಡ, ಯಾರದೋ ಮೇಲಿನ ಸಿಟ್ಟುಗಳು ಕೂಡಾ ದುಷ್ಟ ಸಂತಾನದ ಸೃಷ್ಟಿಗೆ ಕಾರಣವಾದೀತು.

3. ಹೆಣ್ಮಕ್ಕಳ ಪೀಡನೆ ಬೇಡ : ನರಕಾಸುರನ ಸಾವಿಗೆ ಮುಖ್ಯ ಕಾರಣವಾಗಿದ್ದು ಹೆಣ್ಮಕ್ಕಳ ಪೀಡನೆ. ಅಸಹಾಯಕರಾದ ಹೆಣ್ಮಕ್ಕಳ ಮೇಲೆ ದೌರ್ಜನ್ಯ ನಡೆಸುವ ಪರಿಪಾಠ ಸರ್ವ ಕಾಲದಲ್ಲೂಇದೆ. ಕೆಲವು ವರ್ಷಗಳ ಹಿಂದೆ ದೈಹಿಕವಾದ ಹಿಂಸೆ ಹೆಚ್ಚಿದ್ದರೆ ಈಗ ಅದು ಮಾನಸಿಕ ಶೋಷಣೆಯಾಗಿ ಹೊಸ ರೂಪ ಪಡೆದುಕೊಳ್ಳುತ್ತಿದೆ. ಮನೆಗಳಲ್ಲಿ, ಕಚೇರಿಗಳಲ್ಲಿ, ಸಾಮಾಜಿಕವಾಗಿ ಅಬಲೆಯರ ಮಾನಹಾನಿ ಯಾವತ್ತಿಗೂ ಸಲ್ಲದು. ಮಡದಿ ಇರಬಹುದು, ಮಗಳಿರಬಹುದು, ಕಚೇರಿಯ ಸಹೋದ್ಯೋಗಿಯೇ ಇರಬಹುದು, ಅವರ ಶಕ್ತಿ ಸಾಮರ್ಥ್ಯ‌ವನ್ನು ಬೆಂಬಲಿಸುವ ಔದಾರ್ಯವಿರಲಿ ನಮ್ಮಲ್ಲಿ.

4. ದೊಡ್ಡವ ಇನ್ನೊಬ್ಬನಿದ್ದಾನೆ : ನರಕಾಸುರ ಮೂಲತಃ ಕ್ರೂರಿಯೇ ಆದರೂ ಇನ್ನಷ್ಟು ದುಷ್ಟನನ್ನಾಗಿಸಿದ್ದು ವರ ಬಲ. ಹೆತ್ತ ತಾಯಲ್ಲದೆ ಅನ್ಯರು ಮುಟ್ಟಲಾಗದು ಎಂಬ ಮಾತು ಎಲ್ಲರನ್ನೂ ಮೆಟ್ಟಿ ನಿಲ್ಲುವಂತೆ ಮಾಡಿತ್ತು. ಈಗಿನ ಕಾಲದಲ್ಲಿಅಧಿಕಾರ, ಸಂಪತ್ತು, ಜನಪ್ರಿಯತೆಗಳು ಇಂತಹುದೊಂದು ಅಮಲನ್ನು ಸೃಷ್ಟಿಸುತ್ತದೆ. ನಾನೇ ಬಿಗ್‌ ಬಾಸ್‌, ನಾನೇ ನಂಬರ್‌ ಒನ್‌ ಎಂಬ ಜಂಭಗಳು ಇತರರನ್ನು ಕೀಳಾಗಿ ನೋಡುವಂತೆ ಮಾಡುತ್ತವೆ. ಆದರೆ ಯಾವತ್ತೂ ಅಧಿಕಾರ, ಪಟ್ಟಗಳು ಶಾಶ್ವತವಲ್ಲ. ಕಾಲ ಕಾಲಕ್ಕೆ ಹೊಸ ಬಾಸ್‌ಗಳು ಹುಟ್ಟುತ್ತಲೇ ಇರುತ್ತಾರೆ. ಆಗ ಹಳೆ ಕಿರೀಟಗಳು ಉರುಳಲೇಬೇಕು. ಈ ಸತ್ಯವನ್ನು ಅರಿತುಕೊಳ್ಳಬೇಕು. ನಮ್ಮನ್ನು ಮಟ್ಟ ಹಾಕುವುದಕ್ಕೆ ವ್ಯಕ್ತಿಗಳೇ ಬೇಕಾಗಿಲ್ಲ, ಬ್ಯಾಕ್ಟೀರಿಯಾ, ವೈರಸ್‌, ಅಪಘಾತ, ನಮ್ಮದೇ ರಕ್ತದ ಕಣಗಳು ಸಾಕು ಅಲ್ಲವೇ.

5. ಶಕ್ತಿಯ ಸದ್ಬಳಕೆ ಆಗಲಿ : ತಾಕತ್ತಿನಲ್ಲಿ ಕೃಷ್ಣನನ್ನೂ ಮೀರಿಸಬಲ್ಲವನಾಗಿದ್ದ ನರಕಾಸುರ. ಮೂರು ಲೋಕಗಳನ್ನು ಗೆಲ್ಲುವ ಶಕ್ತಿ ಸಣ್ಣದೇನಲ್ಲ. ಆದರೆ, ಈ ಗೆಲ್ಲುವ ಹಾದಿಯಲ್ಲಿಅವನು ತೋರಿದ ಕ್ರೌರ್ಯ ಅವನಿಗೆ ಮುಳುವಾಯಿತು. ಅವನ ಶಕ್ತಿ ಸತ್ಕಾರ್ಯಕ್ಕೆ ಬಳಕೆಯಾಗಿದ್ದರೆ ಅವನೊಬ್ಬ ಮಹಾ ವ್ಯಕ್ತಿಯಾಗಿ ಈಗಲೂ ಗುರುತಿಸಲ್ಪಡುತ್ತಿದ್ದ. ಅಧಿಕಾರ, ಸಾಮರ್ಥ್ಯ‌ಗಳು ನೊಂದವರ ಕಣ್ಣೀರು ಒರೆಸಲು ಬಳಕೆಯಾಗಬೇಕೇ ಹೊರತು ಅವರನ್ನು ಇನ್ನಷ್ಟು ತುಳಿಯುವುದಕ್ಕಲ್ಲಎನ್ನುವುದು ಅರಿವಾಗಬೇಕು.

6. ಅರಿವಿನ ಬೆಳಕು ಮೂಡಲಿ : ಇಷ್ಟೆಲ್ಲ ಮಾಡಿದ ನರಕಾಸುರನಿಗೆ ಕೊನೆಗೆ ಜ್ಞಾನೋದಯವಾಗುತ್ತದೆ. ಅವನು ಹೇಳುತ್ತಾನೆ : ಕೃಷ್ಣ ಇಂದು ನೀನು ಕೊಂದಿರುವುದು ನನ್ನನ್ನು ಮಾತ್ರವಲ್ಲ. ನನ್ನೊಳಗಿನ ಅಹಂಕಾರವನ್ನು, ನನ್ನ ಕೆಟ್ಟತನವನ್ನು. ಹಾಗಾಗಿ, ಇದೊಂದು ಹಬ್ಬವಾಗಬೇಕು ಎನ್ನುತ್ತಾನೆ. ಅದಕ್ಕಾಗಿಯೇ ಮನಸಿನ ಅಂಧಕಾರ ಕಳೆಯುವ ಹೊಸ ದೀಪಾವಳಿ ಹುಟ್ಟಿಕೊಂಡಿದ್ದು.

LEAVE A REPLY

Please enter your comment!
Please enter your name here