ಇನ್ಫೋಸಿಸ್ ನಾರಾಯಣಮೂರ್ತಿ ಅವರು ಮಕ್ಕಳನ್ನು ಬೆಳೆಸುವುದರ ಬಗ್ಗೆ ಎಷ್ಟು ಸೂಕ್ಷ್ಮವಾಗಿ ವಿವರಿಸಿದ್ದಾರೆ ನೀವೇ ನೋಡಿ.

0
5540

ನಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸುವುದರಲ್ಲಿ ನಾವು ಎಡವುತ್ತಿದ್ದೀವಾ. ನಾರಾಯಣಮೂರ್ತಿ, ಇನ್ಫೋಸಿಸ್. ನೆರೆಯವರೊಬ್ಬರು ನೋವಿನಿಂದ ಹಂಚಿಕೊಂಡ ವಿಷಯ : ಆಫೀಸ್ ಕೆಲಸ ಮಾಡಿ ಸುಸ್ತಾಗಿದ್ದ ಆತ‌ ಮನೆಗೆ ಬಂದಾಗ ಹೆಂಡತಿ ಜ್ವರದಿಂದ ಮಲಗಿದ್ದರಂತೆ. ಅದರಲ್ಲೂ ಆಕೆ ತಟ್ಟೆಯಲ್ಲಿ ಆತನ ಊಟ ಜೋಡಿಸಿದ್ದರಂತೆ. “ಪಾಪ ಜ್ವರದಲ್ಲೂ ಇಷ್ಟೆಲ್ಲಾ ಮಾಡಿದ್ದಾಳೆ” ಅಂದುಕೊಂಡ ಆತ ಊಟಕ್ಕೆ ಕುಳಿತರಂತೆ.

ಟಿವಿ ನೋಡುತ್ತಿದ್ದ ಮಗಳಿಗೆ ಪುಟ್ಟಾ, ನನ್ನ ಮಾತ್ರೆ ಅಲ್ಲಿದೆ. ತಂದ್ಕೊಂಡ್ತೀಯಾ ಅಂದಾಗ ಅವಳು ಕಣ್ಣು ತಿರುಗಿಸಿ ತನಗೆ ಇಷ್ಟ ಆಗಲಿಲ್ಲ ಅಂತ ತೋರಿಸಿ ತಂದುಕೊಟ್ಟಳಂತೆ. ಊಟ ಶುರು ಮಾಡಿದ ಆತ ಸಾರಿಗೆ ಉಪ್ಪು ಕಡಿಮೆ ಆಗಿದ್ದು ತಿಳಿದು ಅವಳನ್ನು ಉಪ್ಪು ತಂದುಕೊಡಲು ಕೇಳಿದರಂತೆ. ಈಗಂತೂ ಅವಳು ಕೆಕ್ಕರಿಸಿಕೊಂಡು ತಂದುಕೊಟ್ಟಳಂತೆ.

ಮತ್ತೊಮ್ಮೆ ಆತ ಪುಟ್ಟಾ ಅಂತ ಮಾತು ಮುಗಿಸುವ ಮೊದಲೇ ರಿಮೋಟ್ ಬಿಸಾಡಿ ಏನಪ್ಪ ನಿಂದೂ ನಾನೂ ಸುಸ್ತಾಗಿ ಬಂದಿದ್ದೀನಿ ಅಂತ ದಬಾಯಿಸಿದಳಂತೆ. ಸಾರಿ ಮಗಾ ಅಂತ ಆತ ಸಪ್ಪೆಯಾದರಂತೆ. ಉಕ್ಕಿದ ಕಣ್ಣೀರನ್ನು ಒರೆಸಿಕೊಂಡರಂತೆ. ಕೇಳಿ ನನಗೆ ತುಂಬಾ ನೋವಾಯ್ತು. ಈಗಿನ ಕಾಲದ ನಮ್ಮ ಮಕ್ಕಳು ಯಾಕೆ ಹೀಗೆ ನಡೆದುಕೊಳ್ಳುತ್ತಿದ್ದಾರೆ. ಅವರಿಗೆ ನಾವು ಅತಿಯಾದ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಿದ್ದೀವಾ ಅವರಲ್ಲಿ ಶಿಸ್ತು ತುಂಬಲು, ಅವರಲ್ಲಿ ಸರಿಯಾದ ಮೌಲ್ಯಗಳನ್ನು ತುಂಬಲು ನಾವು ಸೋತಿದ್ದೇವಾ.

ನಮ್ಮ ಮಕ್ಕಳನ್ನು ಸ್ನೇಹಿತರಂತೆ ಕಾಣುವುದು ಸರಿಯಾ. ಅವರಿಗೆ ಸಾಕಷ್ಟು ಸ್ನೇಹಿತರು ಇದ್ದೇ ಇರುತ್ತಾರೆ. ಆದರೆ ಅವರಿಗಿರುವುದು ಒಂದೇ ಒಂದು ಜೊತೆ ಅಪ್ಪ ಅಮ್ಮ. ಅವರೇ ಪೋಷಣೆ ಮಾಡದೇ ಹೋದರೆ ಮತ್ಯಾರು ಮಾಡಬೇಕು. ಈಗ ಹುಟ್ಟಿದ ಮಗುವಿನ “ಆತ್ಮಗೌರವದ” ಬಗ್ಗೆ ಮಾತನಾಡಲಾಗುತ್ತಿದೆ. ಆದರೆ ಅಪ್ಪ ಅಮ್ಮನ ಆತ್ಮಗೌರವದ ಬಗ್ಗೆ ಯಾಕೆ ಯಾರಿಗೂ ಕಾಳಜಿ ಇಲ್ಲ. ಅವರ ಕೆಲಸ ಕೇವಲ ತಮ್ಮನ್ನು ಒಂದಿಷ್ಟೂ ಕೇರ್ ಮಾಡದ ಮಕ್ಕಳ ಆತ್ಮಗೌರವಕ್ಕೆ ಗಾಳಿ ಬೀಸುವುದು ಮಾತ್ರವೇ.

“ಈಗಿನ ಮಕ್ಕಳು ನಮ್ಮ ಮಾತೆಲ್ಲಿ ಕೇಳ್ತಾರೆ” ಅಂತ ಆಗಾಗ ತಂದೆ ತಾಯಿಗಳು ಹೇಳುತ್ತಿರುತ್ತಾರೆ. ಯಾಕೆ ಹೀಗೆ, ಒಮ್ಮೆ ನಾವೆಲ್ಲ ನಮ್ಮ ನಮ್ಮ ಕುಟುಂಬಗಳೊಂದಿಗೆ ರಾತ್ರಿ ಊಟಕ್ಕೆ ಸೇರಿದ್ದೆವು. ಒಂದು ಬೀನ್ ಬ್ಯಾಗ್ ಮಾತ್ರ ಬಿಟ್ಟು ಕುರ್ಚಿಗಳೆಲ್ಲಾ ಫುಲ್ ಆಗಿದ್ದವು. 50 ದಾಟಿದ ಗೆಳೆಯ ಹದಿ ಹರಯದ ತನ್ನ ಮಗಳಿಗೆ ಅಲ್ಲಿ ಕುಳಿತು ಅವಳ ಕುರ್ಚಿ ಬಿಟ್ಟುಕೊಡಲು ಕೇಳಿದ. “ನೀನೇ ಬೀನ್ ಬ್ಯಾಗಲ್ಲಿ ಕೂತ್ಕೋ” ಅಂತ ಅವಳು ಒರಟಾಗಿ ಉತ್ತರಿಸಿದಳು.

ಆತನಿಗೆ ಬೆನ್ನುನೋವಿನ ಸಮಸ್ಯೆ ಇದ್ದಿದ್ದು ನಮಗೆಲ್ಲಾ ಗೊತ್ತಿತ್ತು. ಆದರೆ ಆ ಮಗಳಿಗೆ ಅದು ಅರ್ಥ ಆಗಿರಲಿಲ್ಲ. ಪಾರ್ಟಿ ಮುಗಿದ ಮೇಲೆ ಎಲ್ಲಾ ಹೊರಗೆ ಬಂದ ಸ್ವಲ್ಪ ಹೊತ್ತಿಗೆ ಅವನು ಅವಳಿಗೆ ಒಳಗೆ ಕಾರ್ ಕೀ ಬಿಟ್ಟು ಬಂದಿದ್ದು ತಿಳಿಸಿ ತರಲು ಹೇಳಿದ. “ನಾನೇನು ನಿನ್ನ ಸರ್ವೆಂಟಾ? ಯಾಕೆ ತರಲಿ” ಅಂತ ಉತ್ತರ ಬಂತು. ಎಲ್ಲರ ಮುಂದೆ ಮುಜುಗರಕ್ಕೊಳಗಾದ ಆತ “ಹೌದಮ್ಮ, ನೀನು ನನ್ನ ಮುದ್ದು ರಾಜಕುಮಾರಿ. ನಿನ್ನ ಡ್ಯಾಡಿಯೇ ನಿನ್ನ ಸರ್ವೆಂಟ್” ಅಂದು ವಾತಾವರಣ ತಿಳಿಗೊಳಿಸಲು ಯತ್ನಿಸಿದ. ತಾನೇ ಹೋಗಿ ತಂದ.

ನಮ್ಮ ಮಕ್ಕಳಿಗೆ ನಾವು ಆತ್ಮಗೌರವ, ಆತ್ಮವಿಶ್ವಾಸ ಇತ್ಯಾದಿ ಕಲಿಸುವಂತೆಯೇ, ಅವರು ಅದೆಷ್ಟೇ ದೊಡ್ಡವರಾಗಿರಲಿ, ಅವರ ತಂದೆತಾಯಿಗಳು ಯಾವತ್ತೂ ತಂದೆ ತಾಯಿಗಳೇ, ಅವರಿಗೆ ಸಮಾನರಾಗಲು, ಅವರಿಗೆ ಬಾಸ್‌ಗಳಾಗಲು ಸಾಧ್ಯವಿಲ್ಲ ಅಂತ ಕಲಿಸಿಕೊಡಬೇಕಾದ ಅಗತ್ಯ ಖಂಡಿತಾ ಇದೆ.

ಎಲ್ಲಾ ಅಪ್ಪ ಅಮ್ಮಂದಿರಿಗೆ ನನ್ನ ಸಲಹೆ. “ನಿಮ್ಮ ಮಕ್ಕಳಿಗೆ ಅಪ್ಪ ಅಮ್ಮಂದಿರಾಗೇ ಇರಿ. ಸ್ನೇಹಿತರಾಗಬೇಕಾದ ಅಗತ್ಯ ಇಲ್ಲ. ಅವರಿಗೆ ಸಾಕಷ್ಟು ಸ್ನೇಹಿತರು ಇದ್ದೇ ಇರುತ್ತಾರೆ. ಅವರಿಗೆ ಇರುವುದು ಒಂದು ಜೊತೆ ಅಪ್ಪ ಅಮ್ಮ ಮಾತ್ರ. ಅವರಿಗೆ ಶಿಸ್ತಿನ ನಡುವಳಿಕೆ ಕಲಿಸಿ. ಅವರಿಗೆ ರೂಲ್ಸ್ ತಿಳಿಸಿ ಯಾವಾಗಲೂ ಅವರು ಪಾಲಿಸುವಂತೆ ನೋಡಿಕೊಳ್ಳಿ.

LEAVE A REPLY

Please enter your comment!
Please enter your name here