ಉತ್ತರ ಕರ್ನಾಟಕ ದಿನೇದಿನೇ ಗಂಭೀರವಾದ ಸ್ಥಿತಿಗೆ ತಲುಪುತ್ತಿದೆ, ಇಲ್ಲಿನ ಜನರು ಅಕ್ಷರಸಹ ತಮ್ಮ ಬದುಕನ್ನು ಕಳೆದುಕೊಂಡಿದ್ದಾರೆ, ಇಡೀ ದೇಶವೇ ಈ ಬಗ್ಗೆ ಮರುಕ ವ್ಯಕ್ತಪಡಿಸಿದೆ, ಕೊಡಗು, ಉತ್ತರಕನ್ನಡ, ಪಶ್ಚಿಮಘಟ್ಟ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಇನ್ನೂ ಮೂರು ಅಥವಾ ನಾಲ್ಕು ದಿನ ಭಾರಿ ಮಳೆಯಾಗಲಿದೆ ಎಂದು ಭೂಗರ್ಭ ತಜ್ಞರಾದ ಎಚ್ ಎಂ ಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ.
ಇಂತಹ ತೀಕ್ಷ್ಣವಾದ ವಿಚಾರಗಳನ್ನು ನೋಡಿ ಕಿಚ್ಚ ಸುದೀಪ್ ಅವರು ಮನನೊಂದು ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಸಂತ್ರಸ್ತರಿಗೆ ಸಹಾಯ ಮಾಡುವಂತೆ ಬೇಡಿಕೊಂಡಿದ್ದರು, ಇದರ ಬೆನ್ನಲ್ಲೇ ಪೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆ ಇಂದು ಅಂದರೆ ವರಮಹಾಲಕ್ಷ್ಮಿ ಹಬ್ಬದ ದಿನದಂದು ವಿಜೃಂಭಣೆಯಿಂದ ಕೋಟೆ ನಾಡು ಚಿತ್ರದುರ್ಗದಲ್ಲಿ ಬಿಡುಗಡೆ ಮಾಡುವ ಎಲ್ಲಾ ಸಿದ್ಧತೆಗಳು ನಡೆದಿದ್ದು, ಆದರೆ ಕಡೆಯ ಕ್ಷಣದಲ್ಲಿ ಆಡಿಯೋ ಬಿಡುಗಡೆಯನ್ನು ಮುಂದೂಡಲಾಗಿದೆ ಎಂಬ ಸುದ್ದಿಯು ಹರಿದಾಡಲು ಶುರುವಾಯಿತು.
ಈ ಬಗ್ಗೆ ಕನ್ನಡ ಮಾಧ್ಯಮವೊಂದರಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಕೃಷ್ಣ, ಉತ್ತರ ಕರ್ನಾಟಕ ಸಂಪೂರ್ಣವಾಗಿ ನರಳಿ ಹೋಗಿದೆ, ಅವರು ತಮ್ಮ ಮನೆ ಹಾಗೂ ಬದುಕನ್ನು ಕಳೆದುಕೊಂಡಿದ್ದಾರೆ, ಮಹಾರಾಷ್ಟ್ರದಲ್ಲಿ ಮೇಘ ಸ್ಫೋಟ ಸಂಭವಿಸಿ ಅಲ್ಲಿರುವ ನದಿಗಳು ಉತ್ತರ ಕರ್ನಾಟಕ ಜಿಲ್ಲೆಯ ಕಡೆಗೆ ಉಕ್ಕಿ ಹರಿಯುತ್ತಿದೆ, ನಮ್ಮ ಜನ ಅಷ್ಟೊಂದು ತಣಿಸುತ್ತಿರುವಾಗ, ಅಲ್ಲಿ ಜೀವಹಾನಿ ಆಗುತ್ತಿರುವಾಗ ಇಲ್ಲಿ ನಾವು ಹೇಗೆ ಖುಷಿಯಾಗಿ ಪೈಲ್ವಾನ್ ಆಡಿಯೋ ಬಿಡುಗಡೆ ಮಾಡಿ ಸಂಭ್ರಮ ಪಡುವುದು, ಇದು ಸಾಧ್ಯವಿಲ್ಲ ಎಂಬ ಕಾರಣದಿಂದ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದರು.
ಹಾಗೂ ಸುದೀಪ್ ಅವರ ಅಭಿಮಾನಿಗಳು ಈ ವಿಚಾರವಾಗಿ ದುಃಖ ಪಡುವುದಿಲ್ಲ ಎಂಬ ಭರವಸೆ ನನಗಿದೆ, ಮಳೆ ದಿನೇದಿನೇ ಹೆಚ್ಚುತ್ತಿರುವುದರಿಂದ ಉತ್ತರ ಕರ್ನಾಟಕ ಸಂಪೂರ್ಣ ಮುಳುಗಡೆಯಾಗುವ ಸ್ಥಿತಿ ಬಂದಿದೆ, ಆಡಿಯೋ ಬಿಡುಗಡೆ ಕಾರ್ಯಕ್ರಮ ಮಾಡಿ ಸಂಭ್ರಮಿಸುವ ಬದಲು ಇಂತಹ ಸಂದರ್ಭದಲ್ಲಿ ಉತ್ತರ ಕರ್ನಾಟಕ ನೆರವಿನ ಹಸ್ತ ಚಾಚುವುದು ಉತ್ತಮ ಎಂಬುದು ಚಿತ್ರತಂಡದ ಅನಿಸಿಕೆ.