ಭಗವದ್ಗೀತೆಯು ಮಹಾಭಾರತದಲ್ಲಿನ ಕುರುಕ್ಷೇತ್ರ ಯುಧ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಕೃಷ್ಣನಿಂದ ಅರ್ಜುನನಿಗೆ ಮಾಡಲ್ಪಟ್ಟ ಉಪದೇಶ. ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು.
ಭಗವದ್ಗೀತೆ ಮಹಾಭಾರತ ಮಹಾಕಾವ್ಯದ ಭೀಷ್ಮಪರ್ವದ 23 ನೇ ಅಧ್ಯಾಯದಿಂದ 40 ನೇ ಅಧ್ಯಾಯದ ನಡುವೆ ಬರುವ ಭಾಗ. ಹಿಂದೂ ಧರ್ಮ ಮತ್ತು ತತ್ವಶಾಸ್ತ್ರದ ಮುಖ್ಯ ಪಠ್ಯಗಳಲ್ಲಿ ಒಂದಾದ ಸುಮಾರು 700 ಶ್ಲೋಕಗಳ ಭಗವದ್ಗೀತೆ, ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳ ಒಟ್ಟು ಸಮಾಗಮವೆನ್ನಬಹುದು. ಕೆಲವೊಮ್ಮೆ ಯೋಗೋಪನಿಷತ್, ಅಥವಾ ಗೀತೋಪನಿಷತ್, ಪಂಚಮವೇದವೆಂದೂ ಭಗವದ್ಗೀತೆಯನ್ನು ಕರೆಯಲಾಗುತ್ತದೆ.
ಭಗವದ್ಗೀತೆ ಆರಂಭವಾಗುವುದು ಮಹಾಭಾರತ ಯುದ್ಧದ ಆರಂಭವಾಗುವ ಮೊದಲು. ತಮ್ಮ ಸೈನ್ಯಕ್ಕೆ ರಣಭೂಮಿಯಲ್ಲಿ ಎದುರಾದ ಕೌರವರ ಸೇನೆಯಲ್ಲಿ ತನ್ನ ಬಹಳಷ್ಟು ಬಂಧುಗಳನ್ನು ಕಂಡು ಅರ್ಜುನ ಉತ್ಸಾಹ ಕಳೆದುಕೊಂಡು ಮಾರ್ಗದರ್ಶನಕ್ಕಾಗಿ ಕೃಷ್ಣನತ್ತ ತಿರುಗಿದಾಗ. ಆತ್ಮದ ಅಮರತ್ವದ ಬಗ್ಗೆ ಪ್ರಸ್ತಾಪಿಸುತ್ತ ಕೃಷ್ಣ ಗೀತೋಪದೇಶವನ್ನು ಆರಂಭಿಸುತ್ತಾನೆ. ಇದರ ನಂತರ ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಕರ್ಮ, ಧ್ಯಾನ ಮತ್ತು ಜ್ಞಾನ ಮಾರ್ಗಗಳನ್ನು ವಿವರಿಸುತ್ತಾನೆ. ಇದನ್ನು ಶ್ರೀಕೃಷ್ಣನು ಅರ್ಜುನನಿಗೆ ಮಾರ್ಗಶಿರ ಮಾಸದ ಶುಕ್ಲಪಕ್ಷದ ಏಕಾದಶಿಯ ದಿನ ಉಪದೇಶಿಸಿದನು. ಆದುದರಿಂದ ಇದನ್ನು ಗೀತಾ ಜಯಂತಿ ಅಂತ ಕರೆಯಲಾಗಿದೆ.