ಪಾಂಡವಪುರದಿಂದ ಸುಮಾರು ಮೂವತ್ತೈದು ಕಿಮೀ ದೂರದಲ್ಲಿ ಕಲ್ಲಳ್ಳಿ ಎಂಬ ಗ್ರಾಮವಿದೆ. ಅಲ್ಲಿರುವುದೇ ಈ ಶ್ರೀ ಭೂವರಾಹನಾಥ ಅತ್ಯಂತ ಜಾಗೃತವಾದ ಇತಿಹಾಸ ಪ್ರಸಿದ್ಧ ಕ್ಷೇತ್ರದಲ್ಲಿ ಒಂದು. ಸುಮಾರು ಹದಿಮೂರರಿಂದ – ಹದಿನಾರು ಅಡಿ ಎತ್ತರದ ಏಕಶಿಲಾ ವಿಗ್ರಹ. ಬಹಳ ವರ್ಷಗಳ ಹಿಂದೆ ನಾನು ನಮ್ಮ ಗುರುಗಳ ಜೊತೆಯಲ್ಲಿ ಅಲ್ಲಿಗೆ ಹೋಗಿದ್ದೆ.
ನಿರ್ಜನ ಪ್ರದೇಶದಲ್ಲಿ ಹಳೆಯದಾದ ಒಂದು ದೇವಸ್ಥಾನ. ಅದರಿಂದ ಸುಮಾರು ಅರ್ಧ ಕಿಮೀ ದೂರದಲ್ಲಿ ಅರ್ಚಕರ ಮನೆ. ನಮಗೇ ಕೀಲಿಕೈ ಕೊಟ್ಟು ಪೂಜೆಗೆ ಸಿದ್ಧಮಾಡಿಕೊಳ್ಳಿ ನಾನು ಬರುತ್ತೇನೆ ಎಂದು ಹೇಳಿದ್ದರು. ಸುತ್ತಲೂ ಬಯಲು, ದೇವಸ್ಥಾನದ ಗರ್ಭಗುಡಿಯ ಮುಂದೆ ಹತ್ತಡಿ ಜಾಗಕ್ಕೆ ಮಾತ್ರ ಛಾವಣಿಯು ಇತ್ತು. ಅದು ಗುರುಗಳ ದೇವರ ಪೂಜೆಗಷ್ಟೇ ಸಾಲುವಂತಾಗಿತ್ತು.
ಸರಿ ದೇವಸ್ಥಾನದ ನೆರಳು ಎಲ್ಲಿ ಬೀಳುತ್ತಿತ್ತೋ ಅಲ್ಲಿಯೇ ಒಲೆಯನ್ನು ಇಟ್ಟು ನೈವೇದ್ಯಕ್ಕೆ ಸಿದ್ಧಪಡಿಸುವ ಭಾಗ್ಯ ನನ್ನದಾಗಿತ್ತು. ಸುಮಾರು ಹನ್ನೊಂದು ಗಂಟೆಗೆ ಅರ್ಚಕರು ಬಂದರು. ನಮ್ಮ ದೇವಪೂಜೆ ಮುಗಿಸಿ, ದೇವರನ್ನು ಕಟ್ಟಿಟ್ಟು ಕಾದಿದ್ದೆವು. ಇತಿಹಾಸ ಕೇಳಿದಾಗ ಅವರು ಹೇಳಿದ್ದು, ಇಂದಿಗೆ ಸುಮಾರು ನಾನ್ನೂರು ವರ್ಷಗಳ ಹಿಂದೆ ಇಲ್ಲಿ ಕೇವಲ ವರಾಹದೇವರ ವಿಗ್ರಹ ಮಾತ್ರವೇ ಇತ್ತಂತೆ.
ಗ್ರಾಮಸ್ಥರು ಲಕ್ಷ್ಮೀ ದೇವಿಯರಿಗೂ ಒಂದು ದೇವಸ್ಥಾನ ಕಟ್ಟಬೇಕೆಂದು ಶ್ರೀ ಲಕ್ಷ್ಮೀದೇವಿಯರ ವಿಗ್ರಹ ಮಾಡಿಸಿದರಂತೆ. ಪಕ್ಕದಲ್ಲೇ ದೇವಸ್ಥಾನದ ಕಾರ್ಯ ಭರದಿಂದ ಸಾಗಿತ್ತಂತೆ ಇನ್ನೇನು ಪ್ರತಿಷ್ಠಾಪನೆಗೆ ದಿನ ನಿಗದಿ ಮಾಡುವಷ್ಟರಲ್ಲಿ ದೇವಸ್ಥಾನ ಕುಸಿದು ಬಿದ್ದು ಬಿಟ್ಟಿತಂತೆ. ಇದೇ ರೀತಿ ಮತ್ತೆ ಮತ್ತೆ ಪ್ರಯತ್ನ ಮಾಡಿದರೂ, ಹೇಗೋ ಆ ಕಾರ್ಯ ಕೈಗೂಡಿರಲಿಲ್ಲ.
ವಿಗ್ರಹವನ್ನು ಮಾತ್ರ ದೇವರ ಗರ್ಭಗುಡಿಯಲ್ಲೇ ಸಂರಕ್ಷಣೆ ಮಾಡಲಾಗಿತ್ತಂತೆ. ನಾಲ್ಕನೆಯ ಪ್ರಯತ್ನ ಮಾಡುವ ಕಾಲಕ್ಕೆ, ಅಂದಿನ ಅರ್ಚಕರ ಸ್ವಪ್ನದಲ್ಲಿ ಕಾಣಿಸಿಕೊಂಡ ಶ್ರೀ ಮಹಾಲಕ್ಷ್ಮಿ ಮಗನೇ ಈ ಜನಗಳು ಮೂಡರಂತೆ ನನಗೆ ಪ್ರತ್ಯೇಕವಾದ ದೇವಸ್ಥಾನ ಕಟ್ಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾನು ನನ್ನ ಸ್ವಾಮಿಯ ತೊಡೆಯ ಮೇಲೆ ವಿರಾಜಿತಳಾಗಿದ್ದೇನೆ.
ಅದನ್ನು ಜನರಿಗೆ ತಿಳಿಸು. ಈ ವ್ಯರ್ಥ ಪ್ರಯತ್ನ ಬೇಡವೆಂದು ಅಂತರ್ಧಾನಳಾದರಂತೆ. ನಂತರ ಬೆಳಿಗ್ಗೆ ಊರಿನ ಮುಖ್ಯಸ್ಥರೊಂದಿಗೆ ಸ್ವಪ್ನ ಸೂಚನೆ ತಿಳಿಸಿ ಅವರೊಂದಿಗೆ ಹೋಗಿ ನೋಡಲು ಏನಾಶ್ಚರ್ಯ ಲಕ್ಷ್ಮೀದೇವಿಯರ ವಿಗ್ರಹವು ದೇವರ ವಿಗ್ರಹದ ತೊಡೆಯ ಮೇಲೆ ಏರಿ ಕುಳಿತಿತ್ತಂತೆ.
ಅಂದಿನಿಂದ ಶ್ರೀ ಭೂವರಾಹನಾಥ ಎಂದು ಪ್ರಸಿದ್ಧವಾಯಿತು ಈ ಸ್ಥಳ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.